ಬಸ್ತ್ವಾಡ್ ಬೆಳಗಾವಿ ಜಿಲ್ಲೆಯ ಜೈನ ಸಮಾವೇಶ

ಬಸ್ತ್ವಾಡ್ ಬೆಳಗಾವಿ ಜಿಲ್ಲೆಯ ಜೈನ ಸಮಾವೇಶ

9ನೇ ಡಿಸೆಂಬರ್ 2024 ರಂದು ಬಸ್ತ್ವಾಡ್ ಬೆಳಗಾವಿ ಜಿಲ್ಲೆಯ ಜೈನ ಸಮಾವೇಶದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟವನ್ನು ಪ್ರತಿನಿಧಿಸಿದ್ದಾರೆ

 

ಜೈನ ಸಮಾಜದ ಬೇಡಿಕೆಗಳು ಮತ್ತು ಅವು ಈಡೇರಿದರೆ ಸಮಾಜಕ್ಕಾಗುವ ಲಾಭಗಳು

1- ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಪ್ರತಿ ವರ್ಷ ಕನಿಷ್ಠ 200 ಕೋಟಿ ರೂಪಾಯಿ ಜೈನ ಅಭಿವೃದ್ಧಿ ನಿಗಮಕ್ಕೆ ಕೊಡುವುದು. - ಜೈನ ಧರ್ಮದ ಅಭಿವೃದ್ಧಿ ನಿಗಮ ಸ್ಥಾಪನೆಯಾದರೆ ನಿಗಮದಲ್ಲಿ ಅಧ್ಯಕ್ಷರು, ನಿರ್ದೇಶಕರು ನಮ್ಮ ಸಮಾಜದವರೇ ಇರುತ್ತಾರೆ. ನಮ್ಮ ಸಮಾಜಕ್ಕೆ ಅವಶ್ಯ ಇರುವಲ್ಲಿ ಹಣ ಉಪಯೋಗಿಸಬಹುದು.

2-ಕರ್ನಾಟಕ ಸರಕಾರದ 414 ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಲ್ಲಿ (314 ಹಳೆಯ+100 ಹೊಸ) ಪ್ರತಿ ಜಿಲ್ಲೆಯಲ್ಲಿ ಒಂದು ಮತ್ತು ಜೈನ ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆಗಳಲ್ಲಿ ಮತ್ತು ಶೈಕ್ಷಣಿಕ ಕೇಂದ್ರ ಇರುವ ನಗರಗಳಲ್ಲಿ ಎರಡು ವಿದ್ಯಾರ್ಥಿನಿಲಯಗಳು ಜೈನರ ಸಲುವಾಗಿ ಕೋಡುವುದು. ಬರೀ ಸಸ್ಯಾಹಾರಿ ವಿದ್ಯಾರ್ಥಿ ನಿಲಯಗಳು ಇದ್ದಲ್ಲಿ 50% ಮೀಸಲಾತಿ ಜೈನ ವಿದ್ಯಾರ್ಥಿಗಳಿಗೆ ಇಡುವುದು. ಈ ಬೇಡಿಕೆ ಈಡೇರಿದರೆ ಸಾಲ ಮಾಡಿ ಉನ್ನತ ಶಿಕ್ಷಣ ಪಡೆಯುತ್ತಿರುವವರು, ಹಾಸ್ಟೆಲ್ಗಳಿಗೆ ಊಟಕ್ಕೆ ಎಂದು ತಿಂಗಳಿಗೆ ಎಂಟು, ಹತ್ತು ಸಾವಿರ ಖರ್ಚು ಮಾಡುವುದು ತಪ್ಪುತ್ತದೆ. ವರ್ಷಕ್ಕೆ ಸುಮಾರು 40 ಕೋಟಿ ಸಮಾಜದ ಹಣ ಉಳಿಯತಾಯವಾಗಲಿದೆ.
 

3- ಇಲ್ಲಿಯವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ಸಿಕ್ಕಿಲ್ಲ ಹೀಗಾಗಿ ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ಕೊಡುವುದು ಹಾಗೂ ಇನ್ನು ನಿಗಮದಲ್ಲಿ ಜೈನ ನಿರ್ದೇಶಕರ ಆಯ್ಕೆ ಆಗಿಲ್ಲ ಹೀಗಾಗಿ ತಕ್ಷಣ ಇಬ್ಬರು ಜೈನ ನಿರ್ದೇಶಕರನ್ನು ಆಯ್ಕೆ ಮಾಡುವುದು. ನಿಗಮದ ಅಧ್ಯಕ್ಷ ಸ್ಥಾನ ಎಲ್ಲಾ ಅಲ್ಪಸಂಖ್ಯಾತರ ಸಮುದಾಯಗಳಿಗೆ ಸಿಗುವ ಹಾಗೆ ನಿಯಮ ಮಾಡುವುದು- ನಿಗಮದಲ್ಲಿ ನಮ್ಮ ಸಮಾಜದ ನಿರ್ದೇಶಕರು ಮತ್ತು ಅಧ್ಯಕ್ಷರು ಇದ್ದರೆ ನಿಗಮದಲ್ಲಿ ಇರುವ ಎಲ್ಲ ಸವಲತ್ತುಗಳು ನ್ಯಾಯಯುತವಾಗಿ ಮತ್ತು ಸರಾಗವಾಗಿ ಸಿಗುತ್ತವೆ.

4- ಇಲ್ಲಿಯವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದಲ್ಲಿ ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ಸಿಕ್ಕಿಲ್ಲ, ಆಯೋಗದ ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ಕೊಡಬೇಕು ಮತ್ತು ಇನ್ನು ಆಯೋಗದಲ್ಲಿ ಜೈನ ಸದಸ್ಯರ ಆಯ್ಕೆ ಆಗಿಲ್ಲ ಹೀಗಾಗಿ ತಕ್ಷಣ ಜೈನ ಸದಸ್ಯರು ಆಯೋಗದ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಮತ್ತು ಆಯೋಗದ ಅಧ್ಯಕ್ಷ ಸ್ಥಾನ ಎಲ್ಲಾ ಅಲ್ಪಸಂಖ್ಯಾತರ ಸಮುದಾಯಗಳಿಗೆ ಸಿಗುವ ಹಾಗೆ ನಿಯಮ ಮಾಡಬೇಕು.- ಇದು ಅಲ್ಪಸಂಖ್ಯಾತರಿಗೆಂದೆ ಒಂದು ಕೋರ್ಟ ಇದ್ದ ಹಾಗೆ, ನಮ್ಮ ಸಮಾಜಕ್ಕೆ ಏನಾದರೂ ಅನ್ಯಾಯಗಳು ಆದಾಗ ನಮ್ಮ ಹಕ್ಕುಗಳು ಸಿಗದೇ ಇದ್ದಾಗ ನಾವು ಆಯೋಗಕ್ಕೆ ತಿಳಿಸಿದರೆ ಆಯೋಗ ನಮಗೆ ನ್ಯಾಯ ಕೋಡಿಸುವ ಕೆಲಸ ಮಾಡುತ್ತದೆ.

5- ಅಲ್ಪಸಂಖ್ಯಾತರ ವಿಭಾಗದಲ್ಲಿ ಬರೀ 5% (ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ & ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ) ಜೈನ ಸಮಾಜಕ್ಕೆ ಮೀಸಲಾತಿ ಇದೆ ಅದನ್ನು ಹೆಚ್ಚಿಸಿ 20% ಮಾಡಬೇಕು. - ಸರ್ಕಾರ ಪ್ರತಿ ವರ್ಷ ಅಲ್ಪಸಂಖ್ಯಾತರಿಗೆಂದು ಇಡುವ ಬಜೆಟ್ಟಿನಲ್ಲಿ ನೂರಕ್ಕೆ 20 ಕೋಟಿ ನಮ್ಮ ಸಮಾಜಕ್ಕೆ ಸಿಗುತ್ತದೆ

6- ಪ್ರಾಚೀನ ಜೈನ ಬಸದಿ ಮತ್ತು ಬಸದಿಗಳ ಆಸ್ತಿಯ ಸಂರಕ್ಷಣೆಗಾಗಿ ಕಠೋರ ಕಾನೂನು ತರಬೇಕು ಮತ್ತು ಎಲ್ಲಾ ಪ್ರಾಚೀನ ಬಸದಿ ಮತ್ತು ಆಸ್ತಿಗಳ ಸರ್ವೇ ಮಾಡಿ ಅತಿಕ್ರಮಣ ಆಗಿರುವ ಪ್ರಾಚೀನ ಬಸದಿಗಳ ಅತಿಕ್ರಮಣ ತೆಗೆಯಲು ಸರಕಾರ ವಿಶೇಷ ಕಾನೂನಿನ ವ್ಯವಸ್ಥೆ ಮಾಡುವುದು.- ಈ ಬೇಡಿಕೆ ಈಡೇರಿದರೆ ನಮ್ಮ ಸಮಾಜದ ಮಠ ಮಂದಿರಗಳು, ಮಂದಿರದ ಆಸ್ತಿಗಳು ಅಜರಾಮರವಾಗಿ ಜೈನ ಸಮಾಜದ ಬಳಿ ಉಳಿಯಲಿವೆ

7- ಜೈನ ಸಮಾಜದ ಶಿಕ್ಷಣ ಸಂಸ್ಥೆಗಳಲ್ಲಿ ಮೊಟ್ಟೆ ಕೊಡುವ ನಿರ್ಧಾರ ಸರಕಾರ ಹಿಂದೆ ಪಡೆಯಬೇಕು. - ನಮ್ಮ ಆಹಾರದಿಂದಲೆ ನಮ್ಮ ಆಚಾರ ಎಂದು ನಂಬಿರುವ ನಾವು ನಮ್ಮ ಧರ್ಮದ ಮೂಲ ತತ್ವವನ್ನೆ ಬಿಟ್ಟು ಬಿಡಲು ಸರ್ಕಾರ ಹೇಳುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.

8- ಕರ್ನಾಟಕದಲ್ಲಿ ' ಜೈನ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ' ಮಾನ್ಯತೆ ಬಯಸುವ ಜೈನ ಶಾಲೆಗಳಲ್ಲಿ 25% ನಿರ್ದಿಷ್ಟ ಜೈನ ಧರ್ಮದ ವಿದ್ಯಾರ್ಥಿಗಳು ಇರಬೇಕು ಅನ್ನುವ ನಿಯಮವನ್ನು ರದ್ದು ಮಾಡಬೇಕು. ಅದೇ ರೀತಿ, ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣವನ್ನು ನೀಡುವ ಜೈನ ಸಂಸ್ಥೆಗಳು 50% ಜೈನ ವಿದ್ಯಾರ್ಥಿಗಳನ್ನು ಹೊಂದಿರಬೇಕು ಅನ್ನುವ ನಿಯಮ ವನ್ನು ರದ್ದು ಮಾಡಬೇಕು. ಜೈನ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಮಾನ್ಯತೆ ಬಯಸುವ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಮಾನ್ಯತೆ ನಿಡುವುದು.- ಈ ಬೇಡಿಕೆ ಈಡೇರಿದರೆ ನಮ್ಮ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ, ಬೆಳೆಸಬಹುದು ಮತ್ತು ಸಮಾಜದ ಬಡ ಮಕ್ಕಳಿಗೆ ಸಹಾಯ ಮಾಡಬಹುದು.